Saturday 23 June 2012

ಅಮ್ಮಾ.... ನಾನು ಕದ್ದಿಲ್ಲ



ತಾಯಿ ಮತ್ತು ಮಕ್ಕಳ ನಡುವಿನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿಯ ಹಲವು ರೂಪಗಳು ಕಪಟವಾಗಿದ್ದರೂ ಈ ಪ್ರೀತಿಯು ನಿಷ್ಕಳಂಕವಾಗಿರುತ್ತದೆ. ಮಕ್ಕಳಿಗೆ ನಾನಾ ಕಾರಣಗಳಿಂದ ತಾಯಿಯೊಂದಿಗೆ ಪ್ರೀತಿ ಕಡಿಮೆಯಾದರೂ ತಾಯಿಗೆ ಮಾತ್ರ ಮಕ್ಕಳೊಂದಿಗೆ ಪ್ರೀತಿ ಹೆಚ್ಚಾಗುತ್ತಿರುತ್ತದೆ. ಅದು ಜೀವನದ ಕೊನೆಯವರೆಗೂ ಹಾಗೇ ಮುಂದುವರಿಯುತ್ತದೆ. ತಾಯಿಯು ಮಕ್ಕಳಿಗೋಸ್ಕರ ಸಿಕ್ಕಾಪಟ್ಟೆ ಕಷ್ಟ ಅನುಭವಿಸುತ್ತಾಳೆ. ತಾಯಿಯ ಪ್ರಾರ್ಥನೆಯ ವಸ್ತುವಾಗಿ ಯಾವಾಗಲೂ ಮಕ್ಕಳು ಸ್ಥಾನ ಪಡೆದಿರುತ್ತಾರೆ. ಇಂದು ನಾವು ಹೊರಗಡೆ ಹೋಗಿ ಅಥವಾ ಯಾವುದಾದರೂ ವಾಹನದಲ್ಲಿ ಸುತ್ತಾಡಿ ಸುರಕ್ಷಿತವಾಗಿ ಮನೆಗೆ ತಲುಪುವುದಿದ್ದರೆ ಅದು ತಾಯಿಯ ಪ್ರಾರ್ಥನೆಯ ಫಲ ಎಂದೇ ನಾನು ನಂಬುತ್ತೇನೆ. ಯಾಕೆಂದರೆ ಅವಳ ಪ್ರಾರ್ಥನೆಯಲ್ಲಿ ಸ್ವಾರ್ಥ ಇರುವುದಿಲ್ಲ. ಮಕ್ಕಳಿಗಾಗಿ ಮಿಡಿಯುವ ಹೃದಯದಿಂದ ಹೊರಡುವ ಪ್ರಾರ್ಥನೆಯು ತೀಕ್ಷ್ಣವಾಗಿರುತ್ತದೆ. 
ಮಕ್ಕಳು ಸಂಕಷ್ಟ ಅನುಭವಿಸುವಾಗ ಅವರಿಗೆ ನೆನಪಾಗುವುದು ತಾಯಿಯದ್ದಾಗಿದೆ. ತಾಯಿಯ ಸಾಂತ್ವನದ ನುಡಿಗಳು ಅವರ ಅರ್ಧ ಸಂಕಷ್ಟವನ್ನು ದೂರ ಮಾಡುತ್ತವೆ. ಈ ಘಟನೆಯನ್ನೊಮ್ಮೆ ಓದಿ ನೋಡಿ.  ಒಂದು ವರ್ಷದ ಹಿಂದೆ ನಡೆದ ಘಟನೆ. ಗೆಳೆಯರೊಂದಿಗೆ ಗೋವಾಕ್ಕೆ ಹೋಗಿ ಮರಳುವಾಗ ನಡೆದ ಕಣ್ಣೀರಿನ ಕಥೆಯಿದು. ಗೋವಾದಿಂದ ಕಲ್ಲಿಕೋಟೆಗಿರುವ ಟ್ರೈನ್ ನಿಮಿಷಗಳ ವ್ಯತ್ಯಾಸದಿಂದ ತಪ್ಪಿ ಹೋಯಿತು. ಮನೆಗೆ ಬೇಗನೇ ತಲುಪಬೇಕು ಎಂಬ ತವಕದಿಂದ ವೊದಲು ಬಂದ ಮಂಗಳೂರು ಕಡೆಗಿರುವ ಗಾಡಿ ಹತ್ತಿ ಮಂಗಳೂರು ತಲುಪಿದೆವು. ಆಗ ರಾತ್ರಿ 11ರ ಸಮಯ. ಜನ ಸಂದಣಿ ಅಷ್ಟೇನೂ ಇರಲಿಲ್ಲ. ಕಲ್ಲಿಕೋಟೆಗಿರುವ ಟ್ರೈನಿನ ಕುರಿತು ಅಲ್ಲಿ ವಿಚಾರಿಸಿದಾಗ, ಮುಂಜಾನೆ 6 ಗಂಟೆಗೆ ಎಂಬ ಕಳವಳಕಾರಿ ಉತ್ತರ ಸಿಕ್ಕಿತು. ನಾವು ಸ್ಟೇಶನಿನಲ್ಲಿ ನಿಂತು, ಕುಳಿತು, ನಡೆದು, ಲ್ಯಾಪ್ಟಾಪಿನಲ್ಲಿ ಗೇಮ್ ಆಡಿ ಸಮಯ ಕಳೆದೆವು. ರಾತ್ರಿ ಮೂರು ಗಂಟೆಯ ಸಮಯ....
ವಿಶ್ರಾಂತಿ ಕೊಠಡಿಯ ಕುರ್ಚಿಯೊಂದರಲ್ಲಿ ನಿದ್ರೆಗೆ ಜಾರಿದ ನಾನು ಮಹಿಳೆಯೋರ್ವಳ ಕಿರುಚಾಟದಿಂದ ಥಟ್ಟನೆ ಎಚ್ಚೆತ್ತುಕೊಂಡೆ. 'ದೇವರೇ ನನ್ನ ಸರ ಕಾಣುತ್ತಿಲ್ಲ' ಎಂದು ಅವಳು ಬೊಬ್ಬೆ ಹೂಡೆಯುತ್ತಿದ್ದಳು. ಏನು ಎಂದು ತಿಳಿಯದೆ ಸೇರಿದ್ದ  ಜನರ  ಗುಂಪಿನ ಕಡೆಗೆ ನಾನು ಓಟಕ್ಕಿತ್ತೆ. ಅಲ್ಲಿ ಸೇರಿದ್ದ ಜನರ ಮಾತಿನಲ್ಲಿ ಸರ ಕಳ್ಳತನ ನಡೆದಿದೆ ಎಂದು ತಿಳಿಯಿತು. ಅವರು ಯಾವುದೋ ತೀರ್ಥಕ್ಷೇತ್ರಕ್ಕೆ ಹೋಗಿ ಮರಳುವವರಾಗಿದ್ದರು. ಈ ಮಹಿಳೆ ಅಳು ನಿಲ್ಲಿಸಲಿಲ್ಲ. ಪತಿಯು ಅತ್ತಿತ್ತ ನಡೆಯುತ್ತಾ ಯಾರ್ಯಾರನ್ನೋ ನೋಡುತ್ತಿದ್ದಾನೆ. ಓರ್ವ ಕಪು ಅಂಗಿ ಧರಿಸಿದ ಕಳ್ಳನ ಮುಖಭಾವ ಹೊದಿದ್ದ ಒಬ್ಬ ಹೂಡುಗನು ಅತ್ತಿತ್ತ ಅಲೆಯುತ್ತಿದ್ದುದನ್ನು ನಾನು ನೋಡಿದ್ದೇನೆ ಎಂದು ಗುಂಪಿನಲ್ಲಿದ್ದ ಯಾರೋ ಹೇಳಿದರು. ಅಂತಹ ಚಹರೆ ಹೊಂದಿದ ಹುಡುಗನನ್ನು ಹುಡುಕುತ್ತಾ ಎಲ್ಲರ ಕಣ್ಣುಗಳೂ ಅತ್ತಿತ್ತ ಹರಿದಾಡಿದವು. ಆದರೆ ಫಲಿತಾಂಶ ಶೂನ್ಯ.
ಸಮಯವು ಮುಂದೆ ಸಾಗುತ್ತಿತ್ತು.....
ನಾನು ಮತ್ತು ಗೆಳೆಯ ಕುಳಿತು ಲ್ಯಾಪ್ಟಾಪಿನಲ್ಲಿ  ಸೀಡಿ ನೋಡುತ್ತಿದ್ದೆವು. ಆಗ ನನ್ನ ಬಳಿ ಕುಳಿತಿದ್ದ ಓರ್ವ ವ್ಯಕ್ತಿಯು ನನ್ನನ್ನು ಕರೆಯುತ್ತಾ ಹೇಳಿದನು. 'ಇಲ್ಲಿ ಕುಳಿತಿದ್ದದ್ದು ಆ ಹುಡುಗ ಅಂತ ಕಾಣುತ್ತೆ. ವಿಚಾರಿಸಿ.' ನಾನು ನೋಡಿದೆ.   ಕಪ್ಪು ಅಂಗಿ ಧರಿಸಿದ ಒಬ್ಬ ಹುಡುಗ ನಡೆದುಕೊಂಡು ಹೋಗುತ್ತಿದ್ದನು. ತಡ ಮಾಡದೆ ಆ ಮಹಿಳೆಯ ಗಂಡನಿಗೆ ಮಾಹಿತಿ ನೀಡಿದೆ. ಇದನ್ನು ಕೇಳಿದ್ದೇ ತಡ ಅವನು ಹುಡುಗನನ್ನು ಹಿಡಿಯಲು ಹೊರಗೋಡಿದನು. ಅವನೊಂದಿಗೆ ಹಲವರು ಸೇರಿಕೊಂಡರು. ಲ್ಯಾಪ್ಟಾಪನ್ನು ಮಡಚಿ ನಾನೂ ಕೂಡಾ ಎಲ್ಲರಂತೆ ಓಡಿದೆ. ಆಗಲೇ ಅವರು ಆ ಹುಡುಗನನ್ನು ಹಿಡಿದಾಗಿತ್ತು. ನಾನು ಹುಡುಗನನ್ನೇ ನೋಡಿದೆ. 20ರ ಹರೆಯ ಇರಬಹುದು. ಬಿಳಿ ಮೈ ಬಣ್ಣ, ಅವನು ವಿಪರೀತ ಬೆವರಿದ್ದನು.
'ನೀನಲ್ಲವೇ ಇಲ್ಲಿ ಬಂದು ಸರ ಕದ್ದದ್ದು' ಜನರು ನಾಲ್ಕು ಭಾಗಗಳಿಂದಲೂ ಅವನನ್ನು ಎಳೆದಾಡುತ್ತಾ ಅವನನ್ನು ವಿಚಾರಿಸಿದರು. 'ಇಲ್ಲ, ನಾನು ಕದ್ದಿಲ್ಲ, ನಾನು ಈಗ ಇಲ್ಲಿಗೆ ಬರುತ್ತಿದ್ದೇನಷ್ಟೇ' ಕಣ್ಣೀರು ಸುರಿಸುತ್ತಾ ಅವನು ಹೇಳಿದನು. 'ಸುಳ್ಳು ಹೇಳುತ್ತಿದ್ದೀಯಾ ನನ್ಮಗನೇ' ಎಂದು ಆ ಮಹಿಳೆಯ ಗಂಡ  ಅವನ ಮುಖಕ್ಕೊಂದು ಏಟು ನೀಡಿದನು. ಇದನ್ನು ಕಂಡದ್ದೇ ತಡ ಇತರರೂ ಕೂಡಾ ತಮ್ಮ ಕೈಲಾದುದನ್ನು ನೀಡಿದರು. ಪ್ರತೀ ಒದೆ ಬೀಳುವಾಗಲೂ 'ನಾನು ಕದ್ದಿಲ್ಲ... ದೇವರಾಣೆಗೂ ನಾನು ಕದ್ದಿಲ್ಲ... ನನ್ನನ್ನು  ಹೊಡೆಯಬೇಡಿ' ಎಂದು ಬೇಡುತ್ತಿದ್ದನು. ಜನರಿಗೆ ಅವನ ಕೂಗು ಕೇಳಿಸಲೇ ಇಲ್ಲ. ಏಟು ಜೋರಾಗಿ ಬೀಳ ತೊಡಗಿದಾಗ ಅವನು ಓಡುವ ವಿಫಲ ಪ್ರಯತ್ನ ನಡೆಸಿದನು. ಇದರಿಂದಾಗಿ ಏಟಿನ ವೇಗವು ಹೆಚ್ಚತೊಡಗಿ ಅವನ ಬಾಯಿಯಿಂದ ರಕ್ತ ಒಸರತೊಡಗಿತು. ಆಗಲೂ ಅವನು 'ನಾನು ಕದ್ದಿಲ್ಲ... ನನ್ನ ತಾಯಿಯಾಣೆ ನಾನು ಕದ್ದಿಲ್ಲ' ಎಂದು ಅಳುತ್ತಿದ್ದನು. ಇದನ್ನೆಲ್ಲಾ ನೋಡುತ್ತಿದ್ದ ನಾನು ಕೇವಲ ಮೂಕ ಪ್ರೇಕ್ಷಕನಾದೆ.
ಯಾರೋ ಪೋಲೀಸರಿಗೆ ಸುದ್ದಿ ಮುಟ್ಟಿಸಿದ್ದರಿಂದ ರೈಲ್ವೇ ಪೋಲೀಸರ ಆಗಮನವಾಯಿತು. ಜನರು ಸರಿದು ದಾರಿ ಮಾಡಿಕೊಟ್ಟರು. ಪೂಲೀಸರು ಅವನೊಂದಿಗೆ ವಿಚಾರಿಸಿದಾಗಲೂ ಅವನು 'ಸಾರ್ ನಾನು ಕದ್ದಿಲ್ಲ. ಈಗಷ್ಟೇ ನಾನು ಈ ದಾರಿಯಾಗಿ ಬಂದದ್ದು' ಎಂದು ಉತ್ತರಿಸಿದನು.
'ನೀನು ಎತ್ತ ಹೋಗುವುದಕ್ಕಾಗಿ ಇತ್ತ ಬಂದೆ' ಪೋಲೀಸಿನವನು ಕೇಳಿದನು.
'ಸಾರ್, ನಾನು ಈ ಮಾರ್ಕೆಟಿನಲ್ಲಿ ತರಕಾರಿಯ ಲಾರಿಯಿಂದ ತರಕಾರಿ ಇಳಿಸಿ ರೂಮಿಗೆ ಹೋಗುವಾಗ ಚಾ ಸೇವಿಸಲು ಈ ದಾರಿಯಾಗಿ ಬಂದೆ... ನನ್ನ ಕೊಠಡಿ ಅಲ್ಲಿದೆ' ಎಂದು ದೂರದಲ್ಲಿದ್ದ ಕಟ್ಟಡದ ಕಡೆಗೆ ಬೆರಳು ತೋರಿಸುತ್ತಾ ಹೇಳಿದನು.
'ಚಹಾ ಕುಡಿಯಲು ಬಂದದ್ದಂತೆ' ಎಂದು ಆರ್ಭಟಿಸುತ್ತಾ ಆ ಮಹಿಳೆಯ ಗಂಡ ಅವನ ತಲೆಗೆ ಬಲವಾಗಿ ಹೊಡೆದನು. ಅವನು ಏಟು ತಾಳಲಾರದೆ ಕೆಳಗೆ ಕುಸಿದನು.
ಪೋಲೀಸರು ಆ ಹುಡುಗನನ್ನು ವಿಚಾರಣೆಗೆ ಒಳಪಡಿಸಿದರು.... ಅವನ ಮನೆ ಕಾಸರಗೋಡಿನಲ್ಲಿ. ಕಳೆದ ಎರಡು ತಿಂಗಳಿನಿಂದ ಸಮೀಪದ ಅಂಗಡಿಗಳಿಗೆ ಬರುವ ತರಕಾರಿಗಳನ್ನು ಲಾರಿಯಿಂದ ಇಳಿಸುವ ಕೆಲಸ ಮಾಡುತ್ತಿದ್ದಾನೆ. ಮನೆಯಲ್ಲಿರುವ ತಾಯಿ ಮತ್ತು ತಂಗಿಯನ್ನು ಸಾಕಲಿಕ್ಕಾಗಿ ಈ ಕೆಲಸಕ್ಕೆ ಸೇರಿದ್ದಾನೆ. ಇವಿಷ್ಟು ವಿಚಾರಣೆಯಿಂದ ತಿಳಿದು ಬಂದ ವಿಚಾರಗಳು. ಬಳಿಕ ಪೋಲೀಸಿನವನು ಹೇಳಿದನು. 'ನೀನು ಸರ ಕದ್ದಿದ್ದರೆ ಅದನ್ನು ಮರಳಿಸು. ಸುಮ್ಮನೆ ಯಾಕೆ ಒದೆ ತಿನ್ನುತ್ತೀ'
'ನಾನು ಕದ್ದಿಲ್ಲ ಸಾರ್. ದೇವರಾಣೆಗೂ ನಾನು ಕದ್ದಿಲ್ಲ' ಅವನು ಕಣ್ಣೀರು ಸುರಿಸುತ್ತಾ ಕೈ ಮುಗಿದು ಬೇಡಿಕೊಂಡನು.
'ಇವನು ಕದಿಯುವುದನ್ನು ನೋಡಿದವರಿದ್ದಾರೆಯೇ' ಪೋಲೀಸರು ಕೇಳಿದರು. 'ಇವನು ಇಲ್ಲಿ ಸುತ್ತಾಡುತ್ತಿರುವುದನ್ನು ಒಬ್ಬನು ನೋಡಿದ್ದಾನೆ' ಎಂದು ಹೇಳುತ್ತಾ ಆ ಮಹಿಳೆ ಮತ್ತು ಆಕೆಯ ಗಂಡ ಪೋಲೀಸರೊಂದಿಗೆ ವಿಶ್ರಾಂತಿ ಕೊಠಡಿಯ ಕಡೆಗೆ ಹೆಜ್ಜೆ ಹಾಕಿದರು. ಆ ಹುಡುಗನನ್ನು ನೋಡಿದವನು ಅಲ್ಲೆಲ್ಲೂ ಕಾಣಲಿಲ್ಲ. 'ಎಲ್ಲಿ ಅವನು' ಪೋಲೀಸರು ಕೇಳಿದರು. 'ಲ್ಯಾಪ್ಟಾಪ್ ಬಿಡಿಸಿ ಕುಳಿತ ಒಬ್ಬ ಯುವಕನೂ ನೋಡಿದ್ದಾನೆ' ಯಾರೋ ಹೇಳಿದರು. ಅವನು ಹೇಳಿದ್ದು ನನ್ನ ಕುರಿತಾಗಿತ್ತು. 'ನಾನು ಕಂಡಿಲ್ಲ. ಇವನು ಹೇಳಿದ್ದನ್ನು ಅವರಿಗೆ ತಿಳಿಸಿದ್ದೇನಷ್ಟೇ' ಎಂದು ಹೇಳಲು ಮುಂದಾದೆ.
ಅವನು ಕದ್ದಿದ್ದಾನೆಯೇ ಎಂದು ನನಗೆ ಹೇಳಲು ಅಸಾಧ್ಯ. ಯಾಕೆಂದರೆ ಅವನು ತೆಗೆಯುವುದನ್ನು ನಾನು ನೋಡಿಲ್ಲ. ಈಗ ನನಗೆ ಏನೂ ಹೇಳಲಾಗದ ಸ್ಥಿತಿ. ಈ ಜನರ ಗುಂಪಿನ ಮಧ್ಯೆ ನಾನು ಮೌನಿಯಾದೆ. ಕದ್ದವನು ಸಿಗದಿದ್ದರೆ ಸಿಕ್ಕಿದವನನ್ನು ಕಳ್ಳನಾಗಿಸುವ ಕಾಲವಲ್ಲವೇ ಇದು!!
ಇವನು ಕದಿಯುವುದನ್ನು ನಾನು ನೋಡಿಲ್ಲ..... ಎಂದು ಹೇಳಲು ಮುಂದಾದಾಗ, ಆ ಮಹಿಳೆಯ ಗಂಡನು ಮತ್ತೊಮ್ಮೆ ತನ್ನ ಅಭಿಪ್ರಾಯವನ್ನು ಘೋಷಿಸಿದನು. 'ಇವನಿಗೆ ಇನ್ನೆರಡು ಬಿಗಿದರೆ ಬಾಯಿ ಬಿಡ್ತಾನೆ ಸಾರ್' ಇದನ್ನು ಕೇಳಿದ್ದೇ ತಡ ಅವನು ಪೋಲೀಸರ ಕೈಯಿಂದ ತಪ್ಪಿಸಿ ಓಡಿದನು. ಜನರೂ ಅವನ ಹಿಂದೆ ಓಡಿದರು. ನಾವು ಅಲ್ಲಿಯೇ ನಿಂತೆವು. ಅವನು ಓಡಿದ ಕಾರಣಕ್ಕಾಗಿ ಎಲ್ಲರೂ ಅವನನ್ನು ಕಳ್ಳನೆಂಬ ಪಟ್ಟ ಕಟ್ಟಿ ಬಿಟ್ಟರು. ನನಗೆ ಅವನ ಕಣ್ಣೀರೇ ಕಣ್ಮುಂದೆ ಬರುತ್ತಿತ್ತು. 'ನಾನು ಕದ್ದಿಲ್ಲ' ಎಂಬ ರೋಧನವು ನನ್ನ ಕಿವಿಯಲ್ಲಿ ಮಾರ್ದನಿಸುತ್ತಿತ್ತು.
ಮುಂಜಾನೆ 5.30ರ ಸಮಯ....
ನಾವು ಹೋಗಬೇಕಾದ ಕಲ್ಲಿಕೋಟೆ ಟ್ರೈನ್ ಬಂತು. ನಾವು  ಟ್ರೈನ್  ಹತ್ತಿ ಕುಳಿತು ನಾನು ನೀರಿಗಾಗಿ ಬಾಟಲಿ ಹಿಡಿದು ಹೊರಟೆ. ಸ್ವಲ್ಪ ಮುಂದೆ ಸಾಗಿದಾಗ, ಕತ್ತಲೆ ತುಂಬಿದ ಜಾಗವೊಂದರಿಂದ ಕ್ಷೀಣ ಅಳುವೊಂದು ಕೇಳಿಸಿತು. ನಾನು ಮೆಲ್ಲನೆ ಮುಂದೆ ಸಾಗಿದೆ. ಅದು ಅವನು.... ಜನರ ಮುಂದೆ ಕಳ್ಳನಾದವನು... ಅವನು ಅಳುತ್ತಾ ವೊಬೈಲಿನ ಲ್ಲಿ ಯಾರಿಗೋ ಕಾಲ್  ಮಾಡುತ್ತಿದ್ದಾನೆ. ನಾನು ಅವನ ಮಾತನ್ನು ಆಲಿಸಿದೆ.
'ಹಲೋ, ಅಮ್ಮಾ.... ಇದು ನಾನು' ಅವನು ಬಿಕ್ಕಳಿಸುತ್ತಾ ಹೇಳಿದನು.
'ಅಮ್ಮಾ.... ನಾನು ಕೆಲಸ ಮುಗಿಸಿ ಮರಳುವಾಗ ರೈಲ್ವೇ ಸ್ಟೇಶನಿನಲ್ಲಿ ಎಲ್ಲರೂ ನನ್ನನ್ನು ಹಿಡಿದು ಕಳ್ಳನಾಗಿಸಿದರು' ಅವನ ಸ್ವರ ಗದ್ಗದಿತವಾಯಿತು.
'ಅಮ್ಮಾ... ನಾನು ಕದ್ದಿಲ್ಲ. ಎಲ್ಲರೂ ಸೇರಿ ನನಗೆ ಹೊಡೆದರು. ಅಮ್ಮಾ... ನನ್ನ ಬಾಯಿಂದ ರಕ್ತ ಬರುತ್ತಿದೆ' ಅವನು ಅಳತೊಡಗಿದನು.
'ನನಗೆ ಜೀವಿಸುವ ಆಸೆಯೇ ಹೊರಟು ಹೋಗಿದೆ ಅಮ್ಮಾ. ಅವರೊಂದಿಗೆ ನಾನು ವಾಸವಿರುವ ಸ್ಥಳದ ಕುರಿತು ಹೇಳಿದ್ದೇನೆ. ಅವರು ನನ್ನನ್ನು ಹುಡುಕುತ್ತಾ ಅಲ್ಲಿಗೆ ಬರುವರು. ನಾನು ಕಳ್ಳನಲ್ಲ. ಅಮ್ಮಾ... ನೀನಾದರೂ ನನ್ನನ್ನು ನಂಬು. ನಾನು ಏನನ್ನೂ ಕದ್ದಿಲ್ಲ ಅಮ್ಮಾ....' ಅವನ ಕಣ್ಣಿನಿಂದ ಕಣ್ಣೀರು ಧಾರೆ ಧಾರೆಯಾಗಿ ಇಳಿಯತೊಡಗಿತು. ಇದನ್ನು ಕಂಡ ನನ್ನ ಕಣ್ಣುಗಳಿಗೆ ಸುಮ್ಮನಿರಲಾಗಲಿಲ್ಲ. ನಾನು ಕೂಡಾ ಅತ್ತೆ. ಅವನ ಒಂದೊಂದು ಮಾತೂ ನನ್ನ ಹೃದಯಕ್ಕೆ ಭರ್ಚಿಯಂತೆ ತಿವಿಯುತ್ತಿತ್ತು. ಯಾರೂ ಅವನನ್ನು ನಂಬದ ಸ್ಥಿತಿಯಲ್ಲಿ ಸಮಯವನ್ನು ಲೆಕ್ಕಿಸದೆ ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುವ ತಾಯಿಗೆ ಫೊನ್ ಮಾಡಿ ತಾಯಿಯನ್ನು ನಂಬಿಸುತ್ತಿದ್ದನು. ಎಂಥಾ ಹೃದಯ ವಿದ್ರಾವಕ ಸನ್ನಿವೇಶ!!
ಅಲ್ಲ, ಅವನು ಕಳ್ಳನಲ್ಲ..... ನನ್ನ ಮನಸ್ಸು ಸಾರಿ ಸಾರಿ ಹೇಳುತ್ತಿತ್ತು. ಟ್ರೈನ್ ಹೊರಡಲು ಪ್ರಾರಂಭಿಸಿತು. ನಾನು ಓಡಿ ಹೋಗಿ ಟ್ರೈನ್ ಹತ್ತಿದೆ. ನೀರು ತೆಗೆಯುವುದನ್ನೂ ಮರೆತಿದ್ದೆ. ಅವನಿದ್ದ ಕಡೆಗೆ ನಾನು ನೋಡಿದೆ. ಅವನು ಕಾಣುತ್ತಿಲ್ಲ. ರೈಲು ಮುಂದೆ ಮುಂದೆ ಸಾಗುತ್ತಿದೆ... ಮೂರು ದಿನಗಳ ನಿದ್ದೆ ಹಾಗೂ ಪ್ರವಾಸದ ಆಯಾಸವು ನನ್ನಿಂದ ಮಾಯವಾಗಿತ್ತು. ನಿದ್ರಿಸಬೇಕು ಎಂದು ಕಣ್ಣು ಮುಚ್ಚಿದಾಗ ನನ್ನ ಮನಸ್ಸಿಗೆ ಬರುತ್ತಿದ್ದುದು ಸರ ಕಳೆದುಕೊಂಡ ಆ ಮಹಿಳೆಯ ರೋದನವಲ್ಲ, ಕಳ್ಳನೆಂದು ಜನರಿಂದ ಒದೆ ತಿಂದ ಆ ಹುಡುಗನ ಸ್ಥಿತಿಯಂತೂ ಅಲ್ಲ. ಬದಲಾಗಿ ವೇಳೆಯಲ್ಲದ ವೇಳೆಯಲ್ಲಿ ಮಗನ ಕರೆಗೆ ಓಗೊಟ್ಟ ಆ ವಾತ್ಸಲ್ಯಮಯಿ ತಾಯಿ. ಮಗನನ್ನು ಜನರು ಅಟ್ಟಾಡಿಸಿ ಹೊಡೆದದ್ದನ್ನು , ಮಗನ ಬಾಯಿಂದ ಬಂದ ರಕ್ತವನ್ನು ನೆನೆದು ಮಿಡಿಯುವ ಆ ಮಾತೃ ಹೃದಯ. 'ನನಗೆ ಜೀವಿಸುವ ಆಸೆಯೇ ಹೊರಟು ಹೋಗಿದೆ' ಎಂದು ಮಗನು ಹೇಳುವಾಗ ಆ ತಾಯಿಯ ಪ್ರತಿಕ್ರಿಯೆಯು ಏನಾಗಿರಬಹುದು. ಅವಳು ರೋದಿಸಿರಲಾರಳೇ ,... ಮಗನ ಕಣ್ಣೀರಿನೊಂದಿಗೆ ಅವಳೂ  ಕಣ್ಣೀರು ಸುರಿಸಿರಲಾರಳೇ  ಅಥವಾ 'ನೀನು ಅಳಬೇಡ ,ನಿನ್ನೊಂದಿಗೆ ತಾಯಿ ಇಲ್ಲವೇ' ಎಂದು ಸಾಂತ್ವನ ನೀಡಿರಲಾರಳೇ
ಮೊದಲಾದ ಉತ್ತರ ಸಿಗದ ಪ್ರಶ್ನೆಗಳು ಇಂದಿಗೂ ನನ್ನನ್ನು ಕಿತ್ತು ತಿನ್ನುತ್ತಿವೆ. ಆದರೂ ನನಗೆ ಈಗಲೂ ಆ ತಾಯಿಯೊಂದಿಗೆ ಹೇಳಲಿಕ್ಕಿರುವುದು ಒಂದೇ ಮಾತು 'ಅಮ್ಮಾ ಕ್ಷಮಿಸು. ಮಗನನ್ನು ಕಳ್ಳನಾಗಿಸಿದ ಜನರ ಗುಂಪಿನಲ್ಲಿ ನಾನೂ ಇದ್ದೆ. ಅವನ ನಿರಪರಾಧಿತ್ವವನ್ನು ಸಾಬೀತು ಪಡಿಸುವ ಸಂದರ್ಭ ಒದಗಿ ಬಂದರೂ ನಾನು ಮೌನಿಯಾದೆ. ಅಮ್ಮಾ .. ನನ್ನ ಕ್ಷಮಿಸಮ್ಮಾ.... (ಇದು ಸಂಗ್ರಹಿತ ಘಟನೆಯಾದ್ದರಿಂದ ಇಲ್ಲಿ 'ನಾನು' ಎಂಬ ಪದವನ್ನು ಬಳಸಿದ್ದೇನೆ.)

Monday 18 June 2012

ರೀ .... ಚಪ್ಪಲಿ ಮರೆಯಬೇಡಿ



ನಾನು ಗೇಟು ತೆರೆದು ಬೇಗನೆ ಮನೆಗೆ ಬಂದು ಟಿ.ವಿ. ಓನ್ ಮಾಡಿ ಕುಳಿತೆ. ಇಂಡಿಯಾ, ಶ್ರೀಲಂಕಾ ಮಧ್ಯೆ ಮ್ಯಾಚ್ ನಡೆಯುತ್ತಿತ್ತು. ಅದು ರೋಮಾಂಚನಕಾರಿ ಘಟ್ಟ ತಲುಪಿತ್ತು. ಉಡುಪನ್ನು ಮಡಚಿಟ್ಟುಕೊಳ್ಳುತ್ತಿದ್ದ ಶಮಾ ಟಿ.ವಿ.ಯ ಶಬ್ಧಕ್ಕೆ ಹೊರ ಬಂದಳು. ಸಾವಿರ ತೂತಿರುವ ನನ್ನ ಬನಿಯನ್ ಅವಳ ಕೈಯಲ್ಲಿತ್ತು.
'ನೀವು ಯಾವಾಗ ಬಂದದ್ದು...' ರಾಗ ಎಳೆದಳು.
ನಾನು ಮೌನ ವಹಿಸಿ ಮ್ಯಾಚ್ ನೋಡುತ್ತಾ ಕುಳಿತೆ. ಮಾತಾಡದ್ದನ್ನು ಕಂಡು ಕೈಯ್ಯಲ್ಲಿದ್ದ ಬನಿಯಾನನ್ನು ಎತ್ತಿ ಎಸೆದಳು. ಬೇಡ ಎಸೆದ ಬಲೆಯಂತೆ ಅದು ನನ್ನ ಮೇಲೆ ಬಂದು ಬಿತ್ತು.
'ಏನು ಮಾರಾಯ್ತಿ. ಮನೆಗೆ ಬಂದವರನ್ನು ಓಡಿಸ್ತಿಯಾ' ನಾನು ಪ್ರತಿಕ್ರಿಯಿಸಿದೆ.
'ಮನೆಗೆ ಬರುವುದು ಹೀಗಾ...ಕಳ್ಳರು ಕೂಡಾ ಹೀಗೆ ಬರುವುದಿಲ್ಲ ' ಗರಂ ಆಗಿಯೇ ಉತ್ತರ ಕೊಟ್ಟು ಒಳ ಹೋದಳು.
ನಾನು ಟಿ.ವಿ. ನೋಡುತ್ತಾ ಕುಳಿತೆ. ಶಮಾ ವಸ್ತ್ರ ಮಡಚಿಟ್ಟು ಕಾಫಿ ತಯಾರಿಸಲು ಅಡುಗೆ ಕೋಣೆಗೆ ಹೋದಳು. ಕಾಫಿಗೆ ನೀರಿಟ್ಟು ನನ್ನ ಸಮೀಪ ಬಂದು ಕುಳಿತಳು. ಆಗಲೇ ನನಗೆ ಮನದಟ್ಟಾಯಿತು. ಇದು ಯಾವುದೋ ಒಂದು ಬೇಡಿಕೆಯನ್ನು ನನ್ನ ಮುಂದಿಡಲಿಕ್ಕಿರುವ ಮುನ್ನುಡಿ ಎಂದು.
'ರೀ.. ನನಗೆ ಒಂದು ಚಪ್ಪಲ್ ಬೇಕು. ಇದ್ದ ಚಪ್ಪಲಿ ಸವೆದು ಹೋಗಿದೆ.' ತನ್ನ ಬೇಡಿಕೆ ಮುಂದಿಟ್ಟಳು.
'ಏನು ಚಪ್ಪಲಾ ...! ವೊನ್ನೆಯಲ್ವಾ ತೆಗೆದು ಕೊಟ್ಟದ್ದು. ಅದು ಹೇಗೆ ಸವೆದು ಹೋಗುವುದು. ನೀನೇನು ಪೋಸ್ಟ್  ಮ್ಯಾನ್  ಕೆಲಸ ಮಾಡ್ತಿಯಾ' ನಾನು ಸ್ವಲ್ಪ ಜೋರಾಗಿಯೇ ಉತ್ತರ ನೀಡಿದೆ.
'ಹೋಂ .. ಮೊನ್ನೆಯಂತೆ ವೊನ್ನೆ.... ಕಳೆದ ಬಕ್ರೀದಿಗಲ್ವಾ ನೀವು ತೆಗೆದು ಕೊಟ್ಟದ್ದು. ಈಗ ಒಂದು ವರ್ಷವಾಗುತ್ತಾ ಬಂತು' ಅವಳು ಕೂಡಾ ಸ್ವರವೇರಿಸಿ ಮಾತಿಗಿಳಿದಳು.
ನಾನು ಸ್ವಲ್ಪ ತಣ್ಣಗಾದೆ. ಇನ್ನು ಮಾತನಾಡಿದರೆ ನೆರೆಕರೆಯವರು ಓಡಿ ಬರುವುದು ಗ್ಯಾರಂಟಿ.
ನನ್ನವಳ ಸ್ವರ ಸ್ವಲ್ಪ ಇಂಪು. ಒವ್ಮೊಮ್ಮೆ ನಾನು ಒತ್ತಾಯಿಸಿದರೆ ಹಾಡ್ತಾಳೆ. ಶಾಲೆಯಲ್ಲಿ ಅವಳಿಗೆ ಹಾಡುಗಾರಿಕೆಯಲ್ಲಿ ಬಹು ಮಾನ ಸಿಕ್ಕಿದೆಯಂತೆ. ಆದರೆ ಅವಳಿಗೆ ಕೋಪ ಬಂದು ಸ್ವರವೇರಿಸಿ ಮಾತನಾಡಿದರೆ ಇಂಪೆಲ್ಲಾ ಹೋಗಿ ದೊಡ್ಡ ಯಕ್ಷಗಾನವಾಗುತ್ತದೆ.
'ಏನೇ ಈಗ ಚಪ್ಪಲಿಯ ಅಗತ್ಯ. ಹೊರಗೆ ಸುತ್ತಾಡಲು ಹೋಗುತ್ತಿಯಾ' ಉರಿಯುವ ಬೆಂಕಿಗೆ ತುಪ್ಪ ಸುರಿದೆ. ಆದರೆ ಅದು ಉರಿಯುವ ಬದಲು ನಂದಿ ಹೋಯಿತು. ಅವಳ ಪ್ರತಿಕ್ರಿಯೆಯನ್ನು ಎದುರಿಸಲು ಸಜ್ಜಾಗಿ ನಿಂತ ನನಗೆ ಕೇವಲ ಅವಳ ಕಣ್ಣೀರನ್ನೇ ನೋಡಬೇಕಾಯಿತು. ಪಾಪ ಅವಳು ಕಣ್ಣೀರು ಸುರಿಸುತ್ತಾ ಒಳನಡೆದಳು.
ಅವಳನ್ನು ಸಮಾಧಾನ ಪಡಿಸುವ ಮನಸ್ಸಾಯಿತು. ಆದರೆ ಈ ಮ್ಯಾಚನ್ನು ಬಿಟ್ಟು ಹೋಗುವುದು ಹೇಗೆ. ಆದದ್ದಾಗಲಿ ಮ್ಯಾಚ್ ನೋಡಿ ಮುಗಿಸುವ ಎಂದು ಕುಳಿತೆ.
ಸ್ವಲ್ಪ ಹೊತ್ತಿನ ನಂತರ ಶಮಾ ಚಹಾದೊಂದಿಗೆ ಬಂದಳು.'ಮಳೆ ನಿಂತು ಹೊದ ಮೇಲೆ ಹನಿಯೊಂದು ಮೂಡಿದೆ ' ಎಂಬಂತೆ ಒಂದು ಹನಿ ಕಣ್ಣೀರು ಕೆನ್ನೆಯ ಮೇಲೆಯೇ ಇತ್ತು. ನಾನು ಎಷ್ಟೇ ಸತಾಯಿಸಿದರೂ ಅವಳಿಗೆ ನನ್ನೊಡನಿದ್ದ ಪ್ರೀತಿಯು ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಲಿಲ್ಲ. ಅದೇ ನನ್ನ ದೊಡ್ಡ ಅದೃಷ್ಟ.
'ಇಕೊಳ್ಳಿ ಚಾ' ಎಂದು ಟೀಪಾಯ್ ಮೇಲೆ ಕುಕ್ಕಿ ಅಡುಗೆ ಮನೆ ಕಡೆಗೆ ಹೋದಳು.
'ಈಗ ಚಹಾ ಯಾರು ಕೇಳಿದರು' ನಾನು ಮೆಲ್ಲನೆ ಗುನುಗಿದೆ. ಅದು ಅವಳಿಗೆ ಕೇಳಿಸಿರಬೇಕು.
'ಏನು ನೀವು ಹೇಳಿದ್ದು' ಹೋಗುತ್ತಿದ್ದವಳು ತಿರುಗಿ ಬಂದಳು.
'ಏನಿಲ್ಲ, ನಾನು ಕೇಳದೆಯೇ ನೀನು ಚಹಾ ತಂದಿಯಲ್ಲ ಥ್ಯಾಂಕ್ಸ್'
'ಏನು ನನಗೆ ಕಿವಿ ಕೇಳಿಸ್ತದೆ. ನಿಮಗೆ ಪ್ರೀತಿ ಇಲ್ಲದಿದ್ದರೂ ನನಗೆ ನಿಮ್ಮಲ್ಲಿ ಪ್ರೀತಿ ಇದೆ. ಪತ್ನಿಯರ ಬಾಧ್ಯತೆಯ ಕುರಿತು ದೊಡ್ಡ ದೊಡ್ಡದು ಬರೀತಿರಲ್ಲಾ ' ಕೊನೆಯ ಅಸ್ತ್ರವನ್ನು ಪ್ರಯೋಗಿಸಿದಳು. ಇವಳ ಗಲಾಟೆಯಲ್ಲಿ ಲಾಸ್ಟ್ ಬ್ಯಾಟ್ಸ್ ಮನ್ ಶ್ರೀಶಾಂತ್ ಬೌಲ್ಡ್ ಆದದ್ದು ಗೊತ್ತೇ ಆಗಲಿಲ್ಲ. 
'ಆಯ್ತು ಕಣೆ ನೀನು ಹೇಳಿದ್ದೇ ಸರಿ '
'ನಾನು ಯಾವಾಗಲೂ ಸರಿಯನ್ನೇ ಹೇಳುವುದು. ಇದ್ದದ್ದನ್ನು ಹೇಳಿದರೆ ನಿಮಗಾಗುವುದಿಲ್ಲ ' ಸಿಡುಕುತ್ತಾ ಅಡುಗೆ ಕೋಣೆಗೆ ಹೋದಳು.
ಹೇಗೂ ಇಂಡಿಯಾದ ಹಣೆಬರಹ ಗೊತ್ತಾಯಿತು. ಇನ್ನು ನೋಡಿ ಏನು ಪ್ರಯೋಜನ. ನಾನು ಟಿ.ವಿ. ಆಫ್ ಮಾಡಿ ಚಾ ಕುಡಿದ ಗ್ಲಾಸನ್ನು ಹಿಡಿದು ಅಡುಗೆ ಮನೆಗೆ ಹೊರಟೆ.
'ಇಕೊಳ್ಳೆ, ಎಲ್ಲಿದ್ದಿ' ನಾನು ಸಂಧಾನ ಮಾತುಕತೆಗೆ ಪ್ರಾರಂಭಿಸಿದೆ.
'ಬಂದು ನೋಡಿ. ಎಲ್ಲಿದ್ದೀನೀಂತ ' ಅಡುಗೆ ಕೋಣೆಯಿಂದ ಉತ್ತರ ಬಂತು
'ಅವನೆಲ್ಲಿ'
...................
'ನಿನ್ನಲ್ಲಿ ಕೇಳಿದ್ದು'
'ಯಾರು?'
'ನಿನ್ನ ಮಗ '
'ಓ' ನನಗೆ ಅವನು ಮಗ. ನಿಮಗೆ ಏನಾಗಬೇಕು'
ಅವಳಿಂದ ಉಲ್ಟಾ ಉತ್ತರ ಬರಲು ಶುರುವಾಯಿತು. ಅಂತಹ ಉತ್ತರ ಬರತೊಡಗಿದರೆ ಅದು ಕೋಪ ಇಳಿಯುವುದರ ಸೂಚನೆ.
'ಏನು ಮಾರಾಯ್ತಿ. ನೀನು ಇಲ್ಲಿರಬೇಕಾದವಳಲ್ಲ ಹೈಕೋರ್ಟ್ನಲ್ಲೋ, ಸುಪ್ರೀಮ್ ಕೋರ್ಟ್ನಲ್ಲೋ ಲಾಯರಾಗಬೇಕಿತ್ತು''
'ನಾನು ಲಾಯರಾಗುತ್ತಿದ್ದರೆ ನಿಮ್ಮನ್ನು ಮದುವೆಯಾಗುತ್ತಿರಲಿಲ್ಲ '
'ಹೌದು, ಹೌದು ನೀನು ಲಾಯರಾಗದಿದ್ದುದು ಒಳ್ಳೆದೇ ಆಯಿತು. ಆಗಿದ್ದರೆ ನೀನು ನನಗೆ ಸಿಗುತ್ತಿರಲಿಲ್ಲ ' ಅವಳ ಮುಖದಲ್ಲಿ ನಗು ಮಿನುಗಿತು. ಆದರೂ ನನಗೆ ತೋರ್ಪಡಿಸದೆ ತಿರುಗಿ ನಿಂತು ನಕ್ಕಳು.
'ಅಲ್ಲ ಕಣೇ, ನಮ್ಮ ಮಗ ಎಲ್ಲಿ'?
'ಎಲ್ಲೋ ಹೊರಗೆ ಆಡ್ತಿರಬೇಕು. ಹೋಗಿ ನೋಡಿ ' ಉತ್ತರ ಕೊಟ್ಟಳು. ಅಳಿದುಳಿದ ಕೋಪ ಮಾತ್ರ ಬಾಕಿ ಇತ್ತು.
ನಾನು ಮೂಲೆಯಲ್ಲಿಟ್ಟಿದ್ದ ಫ್ರಿಜ್ಜ್ ನ  ಬಾಗಿಲು ತೆರೆಯುತ್ತಾ ಹೇಳಿದೆ.
'ಇಂದು ರಾತ್ರಿ ಅಡುಗೆ ಮಾಡ್ಬೇಡ ಕಣೇ'
'ಯಾಕೆ?  ಉಪವಾಸ ಕೂರ್ಬೇಕಾ'
'ಅಲ್ಲ, ಇಂದಿನ ಡಿನ್ನರ್ ಹೊರಗೆ. ಬೇಗ ರೆಡಿಯಾಗು'
ಅಷ್ಟು ಹೇಳಿದ್ದೇ ತಡ. ಅವಳ ಸಂತೋಷಕ್ಕೆ ಪಾರವೇ ಇಲ್ಲ. ನನ್ನೊಂದಿಗೆ ಹೊರಗೆ ಕೈಕೈ ಹಿಡಿದು ಸುತ್ತಾಡುವುದೆಂದರೆ ಅವಳಿಗೆ ಪಂಚಪ್ರಾಣ. ಆದರೆ ನನಗೆ ಪುರುಸೊತ್ತಿರಬೇಕಲ್ವಾ'
ಅವಳು ನನ್ನ ಬಳಿ ಬಂದಳು. ಅಮವಾಸೆಯಂತಿದ್ದ ಮುಖ ಈಗ ಹುಣ್ಣಿಮೆಯಂತಾಗಿತ್ತು. ಆದರೆ ಕೋಪ ಬಂದಿತ್ತು ಎಂಬುದರ ಕುರುಹಾಗಿ ಮೂಗಿನ ಕೆಂಪು ಇನ್ನೂ ಮಾಸಿರಲಿಲ್ಲ.
'ರೀ ನೋವಾಯ್ತಾ'
'ಏನು? ನೋವಾಗಲು ನೀನು ಇಂಜೆಕ್ಷನ್ ಕೊಟ್ಟಿದ್ದಿಯಾ'
'ಅಲ್ಲರೀ, ನಿಮ್ಮ ಮನಸ್ಸಿಗೆ ನೋವಾಯ್ತಾ'
'ಎಂಥ ನೋವು ಮಾರಾಯ್ತಿ. ನನಗೆ ಎಷ್ಟೇ ನೋವಾದರೂ ನೀನೇ ಮುಲಾಮು ಹಚ್ಚುತ್ತಿ. ಮತ್ತೆ ಯಾಕೆ ಹೆದರಿಕೆ'
'ಐ ಯಾಂ ರಿಯಲಿ ಸಾರಿ ಆಯ್ತಾ' ನನ್ನ ತೋಳು ಬಳಸಿದಳು.
'ಏ... ರೋಮ್ಯಾನ್ಸೆಲ್ಲ ಮತ್ತೆ. ಈಗ ಹೋಗಿ ರೆಡಿಯಾಗು' ನಾನು ಎಚ್ಚರಿಸಿದೆ. ಅವಳು ಚಿಗರೆಯಂತೆ ಓಡಿದಳು.
ನಾನು ಹೋಗಿ ಸೋಫಾದಲ್ಲಿ ಕುಳಿತು ಟಿ.ವಿ. ಆನ್ ಮಾಡಿದೆ. ಆದರೆ, ಕೇಬಲ್ ಕಟ್ಟಾಗಿತ್ತು.
'ರೀ, ಇಲ್ಲಿ ಬನ್ನಿಯಂತೆ ' ಒಳಗಿನಿಂದ ಕೂಗಿದಳು.
ನಾನು ಹೋಗಿ ನೋಡಿದೆ. ಬಚ್ಚಲಿನ ಬಾಗಿಲಲ್ಲಿ ಡ್ರೆಸ್ ಹಿಡಿದು ನಿಂತಿದ್ದಳು.
'ಇಲ್ಲ ಕಣೆ ನಾನು ಸ್ನಾನ ಮಾಡುವುದಿಲ್ಲ. ನೀನು ಮಾಡಿ ಬಾ' ನಾನು ಸಂದರ್ಭೋಚಿತವಾಗಿ  ಹೇಳಿದೆ.
'ಛೀ ನೀವೊಂದು... ಅದಕ್ಕಲ್ಲರೀ'
'ಮತ್ಯಾವುದಕ್ಕೆ?'
'ನೀವು ಬರ್ತಿರೋ ಇಲ್ವೋ'
ನಾನು ಅವಳ ಬಳಿ ಹೋದೆ. ಅವಳು ಮುಖವನ್ನು ನನ್ನ ಕಿವಿಯ ಬಳಿ ತಂದು ಹೇಳಿದಳು.'ರೀ, ಚಪ್ಪಲಿ ಕೊಳ್ಳಲು ಮರೆಯಬಾರದು'' ಮುಗ್ದ ಹುಡುಗಿ.
ಬೇಗನೆ ಬಾಗಿಲು ಮುಚ್ಚಿ, 'ನೀವು ಬೇಗ ಮಗನನ್ನು ಕರೆದು ತನ್ನಿ.' ಎಂದು ರಾಗ ಎಳೆದಳು.
ಹೊರಗೆ ಆಡುತ್ತಿದ್ದ ಮಗ ಆದಿಲ್ನನ್ನು ಕರೆಯಲು ನಾನು ಹೊರಟೆ.

Thursday 14 June 2012

ರೀ, ನೀವು ನನ್ನನ್ನು ಪ್ರೀತಿಸ್ತಿದ್ದೀರಾ


 ಜಿಮ್ಮಿ ಕಾರ್ಬೆಟರ  ಬೇಟೆಯ ಕುರಿತ ಪುಸ್ತಕವೊಂದನ್ನು ಓದುತ್ತಾ ಮಹಡಿಯ ಮೇಲೆ ತೂಗು ಸೋಫಾದಲ್ಲಿ ಕುಳಿತಿದ್ದೆ. ಅಮೇಜಾನ್ ಕಾಡಿಗೆ ಬೇಟೆಯಾಡಲು ಹೋದ ಲೇಖಕರು ಹಾವುಗಳ ಮಧ್ಯೆ ಸಿಲುಕಿಕೊಂಡಿದ್ದರು. ಆ ವೇಳೆ ನನ್ನ ಮನಸ್ಸು ಆ ಕಾಡಿನಲ್ಲಿತ್ತು. ನಾನು ಬಹಳ ಏಕಾಗ್ರತೆಯಿಂದ ಓದುತ್ತಿದ್ದೆ. ಹಾಗೆ ಓದುತ್ತಿರುವಾಗ ನನ್ನ ಕುತ್ತಿಗೆಯ ಹಿಂಭಾಗದಲ್ಲಿ ಏನೋ ಹರಿದಾಡಿದಂತಾಯಿತು. ಬೆಚ್ಚಿ ಬಿದ್ದು ಪುಸ್ತಕವನ್ನೆಸೆದೆ. ತಿರುಗಿ ನೋಡಿದಾಗ ನನ್ನ ಪ್ರಿಯ ಸಂಗಾತಿ ಶಮಾ ಮೂವತ್ತೆರಡು ಹಲ್ಲುಗಳನ್ನು ತೋರಿಸಿ ನಗುತ್ತಿದ್ದಳು.
'ರೀ, ನೀವ್ಯಾಕೆ ಪುಸ್ತಕ ಬಿಸಾಡಿದ್ದು'  ಭುಜದ ಮೇಲೆದ್ದ ಶಾಲನ್ನು ತಲೆಗೆ ಹಾಕುತ್ತಾ ಕೇಳಿದಳು.
'ಓ ಅದಾ, ಪುಸ್ತಕ ಓದಿ ಆಯ್ತು. ಹಾಗೆ ಬಿಸಾಡಿದ್ದು. ಅದಿರ್ಲಿ, ನಾನು ನಿನ್ನಲ್ಲಿ ಎಷ್ಟೋ ಸಾರಿ ಹೇಳಿದ್ದೇನೆ. ಓದುವಾಗ ಹಾಗೆ ಉಪದ್ರ ಮಾಡಬಾರದು ಅಂತ ' ನಾನು ಎದೆ ಬಡಿತವನ್ನು ಸ್ಥಿಮಿತಕ್ಕೆ ತಂದುಕೊಳ್ಳುತ್ತಾ ಹೇಳಿದೆ.
'ಹಾಗಾದರೆ ಏನಾದರೂ ಬಹುಮುಖ್ಯ ವಿಷಯ ಹೇಳಲಿಕ್ಕಿದ್ದರೆ ಎಂಥ ಮಾಡುವುದು' ಶಮಾ ಕಣ್ಣರಳಿಸಿ ಹೇಳಿದಳು.
'ಅಂಥ ವಿಷಯಗಳಿದ್ದರೆ ಬಂದು ಕರೆಯಬೇಕು. ಅದಲ್ಲದೆ ಹೀಗೆ ಬಂದು ಮೈ ಮುಟ್ಟುದಲ್ಲ ' ನಾನು ಅವಳ ಕೈ ಹಿಡಿದು ಹತ್ತಿರ ಕುಳ್ಳಿರಿಸಿ ಕೈ ಬಳೆಯನ್ನು ಎರಡು ಸುತ್ತು ತಿರುಗಿಸಿದೆ.
ನಾನು ಓದಲು ಕುಳಿತರೆ ಪರಿಸರದ ಪರಿವೆಯೇ ಇರುವುದಿಲ್ಲ. ಏನೇ ಗದ್ದಲಗಳಿರುತ್ತಿದ್ದರೂ ನನ್ನ ಓದುವಿಕೆಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಪ್ರಯಾಣಿಸುವಾಗ ಓದಲು ಕುಳಿತು ಇಳಿಯ ಬೇಕಾದ ಜಾಗ ಬಿಟ್ಟು ಮುಂದೆ ಹೋದದ್ದೂ ಇದೆ.  'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ' ಎಂಬ  ಹಾಡೊಂದಿದೆ. ಆದರೆ ಇದು ನನ್ನ ಪಾಲಿಗೆ 'ಪುಸ್ತಕವೊಂದು ನನ್ನಲ್ಲಿದ್ದರೆ ನನಗದು ಕೋಟಿ ರೂಪಾಯಿಗಳು' ಎಂದಾಗಿದೆ. ಈ ಹಾಡನ್ನು ಶಮಾಳ ಮುಂದೆ ಹಾಡಿ ಬೆನ್ನಿಗೆ ಎರಡು ಗುದ್ದು ಬಿದ್ದ ಫಜೀತಿಯೂ ನಡೆದಿದೆ.
'ಶೀ ಕೈಬಿಡಿ ' ಶಮಾ ಕೈ ಕೊಸರಿಕೊಂಡು ಬಿದ್ದಿದ್ದ ಪುಸ್ತಕವನ್ನು ಎತ್ತಿ ಸೋಫಾದ ಮೇಲಿಟ್ಟಳು. ನನ್ನ ಬಳಿ ಕುಳಿತು ನನ್ನ ಅಂಗಿಯ ಗುಂಡಿ ತಿರುಗಿಸತೊಡಗಿದಳು. ಇದು ಯಾವುದೇ ಬೇಡಿಕೆಗಿರುವ ಮುನ್ನುಡಿ ಎಂದು ತಿಳಿಯಿತು. ಅವಳ ಈ ವರ್ತನೆಯಿಂದ ನನ್ನ ಅಂಗಿಯ ಗುಂಡಿಗಳು ಪೂರ್ಣ ಆಯುಷ್ಯದೊಂದಿಗೆ ಸತ್ತ ಇತಿಹಾಸವೇ ಇಲ್ಲ.
'ಆ ಗುಂಡಿಯನ್ನು ಬದುಕಲು ಬಿಡು ಮಾರಾಯ್ತಿ'   ನಾನು ಅವಳ ಕೈಯನ್ನು ಗುಂಡಿಯಿಂದ ಬಿಡಿಸಿದೆ.
'ರೀ, ನಿಮ್ಮಲ್ಲಿ ನನಗೆ ಒಂದು ವಿಷಯ ಕೇಳಲಿಕ್ಕೆ ಉಂಟು. ನೀವು ಒಪ್ತೀರಾ'
'ವೊದಲು ಕೇಳು. ಆ ಮೇಲೆ ತೀರ್ಮಾನಿಸುವ ಒಪ್ಪಬೇಕೋ ಬೇಡವೋ ಅಂಥ '
ಶಮಾ ತನ್ನ ಅರ್ಧ ಭಾರವನ್ನು ನನ್ನ ಮೇಲೆ ಹಾಕಿದಳು. ಆದ್ದರಿಂದ ಇದು ಬಹಳ ಭಾರದ ಬೇಡಿಕೆ ಇರಬಹುದೆಂದು ಭಾವಿಸಿದೆ.
'ರೀ, ನನ್ನ ತಮ್ಮ ಇದ್ದಾನಲ್ಲಾ......'
'ಹೌದು ಇದ್ದಾನೆ. ಏನಾಯಿತು ಅವನಿಗೆ' ನಾನು ಮಧ್ಯದಲ್ಲಿ ಬಾಯಿ ಹಾಕಿದೆ.
'ವೊದಲು ನಾನು ಹೇಳುವುದನ್ನು ಪೂರ್ತಿಯಾಗಿ ಕೇಳಿ. ಆ ಮೇಲೆ ನಿಮ್ಮ ಕಮೆಂಟ್' ಎಂದು ನನ್ನ ತಲೆಗೆ ವೊಟಕಿದಳು.
'ಓ.ಕೆ, ಓ.ಕೆ ನೀನು ಹೇಳು'
'ನನ್ನ ತಮ್ಮ ಇನ್ನು ಮುಂದೆ ಇಲ್ಲಿ ಉಳಕೊಂಡು ಕಾಲೇಜಿಗೆಹೋದರೆ ಹೇಗೆ' ಅವಳ ಬೇಡಿಕೆಯ ಮಂಡನೆಯಾಯಿತು.
ರೋಗಿ ಬಯಸಿದ್ದೂ ಹಾಲು ವೈದ್ಯರು ಕೊಟ್ಟದ್ದೂ ಹಾಲು ಎಂಬಂತಾಯಿತು. ಅವನನ್ನು ಮನೆಯಲ್ಲಿ ನಿಲ್ಲಿಸಬೇಕೆಂಬ ಹಂಬಲ ನನಗೆ ವೊದಲೇ ಇತ್ತು. ಆದರೆ ಇದನ್ನು ಅವಳಲ್ಲಿ ಹೇಳಿರಲಿಲ್ಲ. ಅವನು ನನಗೆ ಅಳಿಯ ಮಾತ್ರವಲ್ಲ, ಉತ್ತಮ ಗೆಳೆಯನೂ ಆಗಿದ್ದ. ಉತ್ತಮ ಸ್ವಭಾವವೂ ಅವನಲ್ಲಿತ್ತು. ನಾನು ಶಮಾಳನ್ನು ಮದುವೆಯಾದುದರಲ್ಲಿ ಅವನ ನಡವಳಿಕೆಯ ಪಾತ್ರವೂ ಇತ್ತು.
'ಇಲ್ಲಿಂದ ಹೋದರೂ ಮನೆಯಿಂದ ಹೋದರೂ ತಲುಪುವುದು ಕಾಲೇಜಿಗಲ್ಲವೇ' ನಾನು ಕೈಯ್ಯಗಲಿಸಿ ಸೋಫಾದಲ್ಲಿ ಒರಗಿಕೊಳ್ಳುತ್ತಾ ಹೇಳಿದೆ.
'ನಾನು ಏನೇ ಹೇಳಿದರೂ ನಿಮಗೆ ಕೇರ್ಲೆಸ್. ನಿಮ್ಮ ಮುಂದೆ ನನ್ನ ಮಾತಿಗೆ ಬೆಲೆಯೇ ಇಲ್ಲ ' ನನ್ನ ಮಾತು ಕೇಳಿ ಶಮಾ ಸ್ವಲ್ಪ ಗರಮ್ ಆದಳು.
'ಯಾರು ಹಾಗೆ ಅಂದದ್ದು'
'ಮತ್ತೆ ನೀವು ಹಾಗೆ ಯಾಕೆ ವರ್ತಿಸುವುದು'
ಶಮಾ ಹಠ ಹಿಡಿದರೆ ಅದನ್ನು ಸಾಧಿಸುವವರೆಗೆ ಗರಿಷ್ಟ  ಪ್ರಯತ್ನ ಮಾಡುತ್ತಿದ್ದಳು. ಅವಳ ಹಠ ಯಶಸ್ವಿಯಾಗದಿದ್ದರೆ ಅವಳಿಗೆ ಬೇಸರವೇನೂ ಆಗುತ್ತಿರಲಿಲ್ಲ. ಅದು ಅವಳಲ್ಲಿರುವ ಪ್ಲಸ್ ಪಾಯಿಂಟುಗಳಲ್ಲೊಂದು. ನಾನು ಅವಳನ್ನು ಮದುವೆಯಾದ ಸಂದರ್ಭದಲ್ಲಿ ಅತ್ತೆ ಹೇಳಿದ್ದರು. 'ನೋಡು, ಇವಳಿಗೆ ಕೋಪ ಸ್ವಲ್ಪ ಜಾಸ್ತಿ. ಇವಳ ತಂದೆಯ ಕೊಂಡಾಟದಿಂದ ಹೀಗಾಗಿದೆ. ಆದರೆ, ಈ ಕೋಪ ಹೆಚ್ಚು ಹೊತ್ತು ನಿಲ್ಲುವುದಿಲ್ಲ .'
'ಕೋಪ ಹೆಚ್ಚು ಹೊತ್ತು ನಿಲ್ಲುವುದಿಲ್ಲು ಎಂದು ಹೇಳಿದ್ದನ್ನು ಕೇಳಿ ನನಗೆ ಸ್ವಲ್ಪ ಸಮಾಧಾನವಾಗಿತ್ತು. ಅತ್ತೆ ಒಂದು ತಪ್ಪು  ಮಾಡಿದ್ದರು. ಶಮಾಳಿಗೆ ಯಾವೆಲ್ಲಾ ಸಂದರ್ಭಗಳಲ್ಲಿ ಕೋಪ ಬರುತ್ತದೆಂದು ಪಟ್ಟಿ ತಯಾರಿಸಿ ಕೊಟ್ಟಿದ್ದರೆ ನನ್ನ ಬೆನ್ನಿಗೆ ಬೀಳುವ ಗುದ್ದುಗಳನ್ನೂ ಪಾತ್ರೆಗಳ ಮೇಲಾಗುವ ಅಮಾನುಷ ವರ್ತನೆಗಳನ್ನೂ ಕಡಿಮೆ ಮಾಡಬಹುದಾಗಿತ್ತು.
'ನೋಡು ಬಂಗಾರಿ, ನೀನು ನನ್ನ ಮುಂದಿಟ್ಟ ಯಾವುದೇ ಬೇಡಿಕೆಗಳನ್ನು ನಾನು ತಿರಸ್ಕರಿಸಿದ್ದೇನೆಯೇ? ಈ ಹುಡ್ಗಿರೇ ಹೀಗೆ. ಪತ್ನಿ ಹೇಳಿದ ಹಾಗೆ ಕೇಳಿದರೂ, ಕೊನೆಗೆ ಹೇಳ್ತಾರೆ ನೀವು ನನಗೆ ಏನೂ ಮಾಡಿಕೊಡಲಿಲ್ಲ ಎಂದು. ಹಾಗೆ ಹೇಳುವಾಗ, ಎಷ್ಟು ಬೇಜರಾಗುತ್ತದೆ ಗೊತ್ತಾ' ನಾನು ಮುಖ ಬಾಡಿಸಿ ಹೇಳಿದೆ.
'ಓ..... ಸಾಕು ನಿಮ್ಮ ನಾಟಕ . ಪುರುಷರೆಲ್ಲ ಯಾಕೆ ಹೀಗೆ' ಅವಳು ಹುಸಿ ಕೋಪದಿಂದ ಮುಖ ತಿರುಗಿಸಿದಳು.
'ಓಕೆ. ಪುರುಷರಿಗೆ ಕರುಣೆ ಇಲ್ಲ. ಒಪ್ಪಿಕೊಳ್ತೇನೆ ' ತರ್ಕವನ್ನು ಮುಂದುವರಿಸಲು ನನಗೆ ಆಸಕ್ತಿ ಇರಲಿಲ್ಲ. ಹಾಗೆ ನಾನು ಅವಳ ವಾದವನ್ನು ಒಪ್ಪಿಕೊಂಡೆ.
'ಹಾಗೆ ದಾರಿಗೆ ಬನ್ನಿ ' ಕೋರ್ಟಿನಲ್ಲಿ ವಾದಿಸಿ ಕೇಸು ಜಯಿಸಿದಂತಹ ಗೆಲುವಿನ ನಗೆ ಶಮಾಳ ಸುಂದರ ವದನದಲ್ಲಿತ್ತು.
'ನಿನಗೆ ಒಂದು ವಿಷಯ ಗೊತ್ತುಂಟಾ' ನಾನು ಅವಳಲ್ಲಿ ಕೇಳಿದೆ.
'ಹೇಳಿದರಲ್ಲವೇ ಗೊತ್ತಾಗುವುದು' ರೆಡಿಮೇಡ್ ಪ್ರತಿಕ್ರಿಯೆ ಬಂತು.
'ನೀವು ಹೆಂಗಸರನ್ನು ಹೊಗಳಿ ಅಟ್ಟದಲ್ಲಿರಿಸ್ತಿಯಲ್ಲ. ಹೆಂಗಸರಿಗೆ ಬಯಸುವಾಗ ಅಳಲು ಸಾಧ್ಯ, ಆದರೆ ನಗಲು ಸಾಧ್ಯವಿಲ್ಲ.'
ನಾನು ಹೇಳಿದ್ದು ಸತ್ಯ ಅಂತ ಅವಳಿಗೆ ಗೊತ್ತಾಗಿತ್ತು. ಅವಳು ನನ್ನ ತೊಡೆ ಮೇಲೆ ಗುದ್ದಿ ಹೇಳಿದಳು. ಅದೆಲ್ಲಾ ಇರಲಿ, ನಾನು ಹೇಳಿದ ವಿಷಯ ಏನಾಯಿತು'
'ಯಾವ ವಿಷಯ' ನಾನು ಗೊತ್ತಿಲ್ಲದವನಂತೆ ಕೇಳಿದೆ.
'ನನ್ನ ತಮ್ಮನ ವಿಚಾರ '
'ಓ ಅದಾ, ನೋಡು ಶಮಾ ಅವನನ್ನು ಇಲ್ಲಿ ನಿಲ್ಲಿಸಿ ನಮ್ಮ ಗಲಾಟೆಗಳನ್ನು ತೋರಿಸುವುದೇಕೆ'
'ಹಾಗಾದರೆ ಆ ಪ್ರಜ್ಞೆ ಉಂಟಲ್ಲಾ. ಇನ್ನಾದರೂ ನೀವು ನನ್ನೊಂದಿಗೆ ಗಲಾಟೆ ಮಾಡುವುದನ್ನು ನಿಲ್ಲಿಸಬಹುದು ' ಯಾವುದೋ ದೊಡ್ಡ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಂತೆ ಶಮಾ ಕಣ್ಣರಳಿಸಿ ಹೇಳಿದಳು.
ನಾನು ಒಳಗೊಳಗೇ ನಕ್ಕೆ. ಯಾಕೆಂದರೆ ಈ ವರೆಗೆ ನಾನು ಏಕಾಂಗಿಯಾಗಿ ಹೋರಾಡುತ್ತಿದ್ದೆ. ಇನ್ನು ಅಳಿಯನಿಂದಾಗಿ ನನಗೆ ಆನೆ ಬಲ ಬಂದಂತಾಗಬಹುದು.
'ರೀ ನೀವು ಒಪ್ತೀರೋ, ಇಲ್ವೋ ಫಸ್ಟ್ ಅದು ಹೇಳಿ ' ಅವಳು ತನ್ನ ಪಟ್ಟು ಸಡಿಲಿಸಲಿಲ್ಲ.
'ನನಗೆ ಗೊತ್ತಿತ್ತು ನೀವು ಒಪ್ತೀರಿ ಅಂತ '
'ಒಪ್ಪದೆ ಬೇರೆ ದಾರಿಯಿದ್ದರಲ್ಲವೇ' ನಿನ್ನ ಪ್ರತಿಭಟನೆಯ ಮುಂದೆ ತಲೆಬಾಗದಿರಲಾಗುತ್ತದಾ, ನೀನು ಸ್ವಾತಂತ್ರ್ಯ ಸಂಗ್ರಾಮಗಳಲ್ಲಿರುತ್ತಿದ್ದರೆ, ನಮ್ಮ ದೇಶವು 1947ಕ್ಕಿಂತ ವೊದಲೇ ಸ್ವತಂತ್ರವಾಗುತ್ತಿತ್ತೋ ಏನೋ '
'ಸಾಕು ಸಾಕು ನಿಮ್ಮ ಸೋಪಿಂಗ್'
ಶಮಾ ನನ್ನ ಭುಜದ ಮೇಲೆ ತಲೆ ಒರಗಿಸಿದಳು. ಹಗಲೆಲ್ಲಾ ಮಾಡಿದ ಕೆಲಸದ ಆಯಾಸವು ಅದರಲ್ಲಿ ತಿಳಿಯುತ್ತಿತ್ತು.
'ರೀ, ನೀವು ನನ್ನನ್ನು ಪ್ರೀತಿಸ್ತಿದ್ದೀರಾ' ನನ್ನ ಕೈ ಮೇಲೆ ಕೈಯಿಟ್ಟು ಕೇಳಿದಳು.
  ಈ ಹುಡುಗಿಯರು ಹೀಗೇನೆ. ಹುಚ್ಚು ಮನಸ್ಸು. ಗಂಡ ಪ್ರೀತಿಸ್ತಾನೆ ಅಂತ ಗೊತ್ತಿದ್ದರೂ ಅದನ್ನು ಆಗಾಗ ಕನ್ಫರ್ಮ್ ಮಾಡುತ್ತಿರುತ್ತಾರೆ.
'ಯಾಕೆ ಮಾರಾಯ್ತಿ ಈಗ ಇಂತಹ ಪ್ರಶ್ನೆ' ನಾನು ಅವಳ ಕೂದಲಲ್ಲಿ ಕೈಯಾಡಿಸುತ್ತಾ ಕೇಳಿದೆ.
'ಹೀಗೆ ಸುಮ್ಮನೆ ಕೇಳಿದ್ದು, ರೀ ನಂಗೆ ನಿದ್ದೆ ಬರ್ತದೆ. ನಾನು ಹೋಗ್ತೇನೆ. ಓದಿದ್ದು ಸಾಕು. ಬೇಗ ಬನ್ನಿ ' ಶಮಾ ಎದ್ದು ರೂಮಿನ ಕಡೆಗೆ ಹೋದಳು. ಅವಳು ಎದ್ದು ಹೋಗುವಾಗ ನಾನೂ ಕೂಡಾ ಅವಳ ಹಿಂದೆ ಹೋಗಬಹುದೆಂದು ಭಾವಿಸಿದ್ದಳು. ಅವಳ ಆಲೋಚನೆ ಉಲ್ಟಾ ಹೊಡೆಯಿತು. ನಾನು ಏಳದ್ದನ್ನು ಕಂಡು ಅವಳು ಹೇಳಿದಳು.
'ರೀ ನೀವು ಬರ್ತೀರೋ ಇಲ್ವೋ'
'ನೀನು ಹೋಗು. ನನಗೆ ಸ್ವಲ್ಪ ಓದ್ಲಿಕ್ಕುಂಟು' ಅವಳನ್ನು ಓರೆಗಣ್ಣಿನಿಂದ ನೋಡುತ್ತಾ ಹೇಳಿದೆ.
'ನೀವು ಬೆಳಿಗ್ಗೆ ವರೆಗೆ ಓದುತ್ತಾ ಇರಿ. ನಾನು ಬಾಗಿಲು ಹಾಕಿ ಮಲಗುತ್ತೇನೆ. ಮತ್ತೆ ಬಂದು ಬಾಗಿಲು ತಟ್ಟಿದರೆ ನಾನು ತೆರೆಯಲಿಕ್ಕಿಲ್ಲ. ಹೊರಗೆ ಮಲಗಬೇಕು'
'ಓ.ಕೆ '
ಶಮಾ ಸಿಡುಕಿನಿಂದ ಹೋದಳು. ನಾನು ನೆಪ ಮಾತ್ರಕ್ಕೆ ಓಕೆ ಅಂದ್ರೂ ಅವಳ ಹಿಂದೇನೇ ಎದ್ದು ಹೋದೆ. ಯಾಕೆಂದರೆ ಇಲ್ಲಿ ತನಕ ನಾನು ಹೊರಗೆ ಮಲಗಲಿಲ್ಲ. ಇನ್ನು ಹೊಸದಾಗಿ ಆ ಅನುಭವ ಆಗುವುದು ಬೇಡ ಎಂಬ ಮುಂಜಾಗ್ರತಾ ಕ್ರಮ....

Sunday 10 June 2012

ಬಾಲ್ಯದ ನೆನಪು

ಮಳೆಯ ಹನಿಗಳು ತಟಪಟ ಉದುರುತ್ತಿದ್ದಂತೆ 

ಮನವು ಬಾಲ್ಯದ ಕಡೆಗೆ  ಕಾಲ್ಕಿತ್ತಿತು 

ಎಷ್ಟೊಂದು ಸುಂದರ ಆ ಬಾಳು 

ಆದರೆ ಇಂದು ಅದು.....

ಬರೇ ನೆನಪು  ಮಾತ್ರ 

ಮಳೆಗೆ ನೆನೆದು ತಾಯಿ ಕೊಟ್ಟ ಪೆಟ್ಟು 

ಇಂದಿಗೂ ಹಚ್ಚ ಹಸುರಾಗಿ ಉಳಿದಿದೆ 

ನಾನು ಈಜಿ ಆಡಿದ ತೋಡು ,


ಉಯ್ಯಾಲೆ ಕಟ್ಟಿದ್ದ ಗೀರು ಮರದ ರೆಂಬೆ 

ಹತ್ತಿ ಇಳಿದ ಮಾವು , ಪೇರಳೆ ಮರಗಳು 

ನನ್ನ ಕೈ ಬೀಸಿ ಕರೆಯುತಿವೆ  ..... 

ನನಗೆ ಹೋಗಲು ಮುಜುಗರ 

ಯಾಕೆಂದರೆ ನಾನೀಗ ಯುವಕ 

ಈ ಆಟವೆಲ್ಲಾ ಬಾಲ್ಯಕ್ಕೆ ಸೀಮಿತವಲ್ಲವೇ???